Tuesday, September 6, 2016

ಅಮೃತಮಹಲ್

ಭಾರತದ ಗೋ ತಳಿಗಳಲ್ಲಿರುವ ಮೂರು ವಿಭಾಗಗಳಲ್ಲಿ ಅಮೃತಮಹಲ್ ಕೆಲಸಗಾರ ತಳಿವರ್ಗಕ್ಕೆ ಸೇರಿದವು.
ಮೂಲತಃ ಕರ್ನಾಟಕದ ಹಾಸನ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯವುಗಳಾದ ಇವುಗಳನ್ನುವಿಶೇಷವಾಗಿ ಮೈಸೂರು ಅರಸರು ೧೫೭೨ ರಿಂದ ೧೬೩೬ರ ಕಾಲಘಟ್ಟದಲ್ಲಿ ಅಭಿವೃದ್ಧಿಗೊಳಿಸಿದರು. ಯುದ್ಧಗಳ ಸಂದರ್ಭದಲ್ಲಿ ಸಾಮಾನು - ಸರಂಜಾಮುಗಳ ಸಾಗಾಟಕ್ಕಾಗಿ ತಳಿಯ ಅಭಿವೃದ್ಧಿಯಾಯಿತು. ಮಾತ್ರವಲ್ಲ, ತೋಟಗಳಲ್ಲಿ ಇವು ಇಂದಿಗೂ ಕಾವಲು ನಾಯಿಯ ಕೆಲಸವನ್ನು ಮಾಡುತ್ತಿವೆ. ಸಾಕಿದ ಒಡೆಯನಿಗೆ ಅತ್ಯಂತನಿಷ್ಠೆಯನ್ನು ತೋರಿಸುವ ಅಮೃತಮಹಲ್ ತಳಿಗಳು ತಮ್ಮ ಒಡೆಯನಿಗಾಗಿ ಯಾವುದೇ ಕೆಲಸವನ್ನು ಮಾಡಿಕೊಡಲು ಸಿದ್ಧವಾಗಿರುತ್ತವೆ. ಮೈಸೂರು ಅರಸರ ಕಾಲದಲ್ಲಿ ಇವುಬೆಣ್ಣೆ ಚಾವಡಿಎನ್ನುವ ಹೆಸರಿನಿಂದ ಪ್ರಸಿದ್ಧವಾಗಿದ್ದವು. ಮುಂದೆ ಹೈದರಾಲಿಯ ಮಗ ಟಿಪ್ಪೂಸುಲ್ತಾನನು ಹಳೇ ಮೈಸೂರು ಪ್ರದೇಶದಲ್ಲಿ ಇವುಗಳನ್ನು ಬೆಳೆಸಿ ಅಮೃತಮಹಲ್ಎನ್ನುವ ನಾಮಕರಣ ಕೂಡ ಮಾಡಿದನು. ಟಿಪ್ಪುವಿನ ದಿವಾನರಾಗಿದ್ದಪೂರ್ಣಯ್ಯನವರು ಅಮೃತಮಹಲ್ ತಳಿಗಳನ್ನು ತಮಿಳುನಾಡಿನಲ್ಲಿ ಪಸರಿಸುವುದಕ್ಕೆ ಕಾರಣೀಕರ್ತರು. ಇಂದಿಗೂ ತಮಿಳುನಾಡಿನ ಕೆಲಭಾಗಗಳಲ್ಲಿ ಅಮೃತಮಹಲ್ ತಳಿಯ ದನ ಕರುಗಳನ್ನುಪೂರ್ಣಯ್ಯನ ದನಗಳೆಂದೇ ಕರೆಯುತ್ತಾರೆ.
ಮೈಸೂರು ಅರಸರ ಹಾಗೂ ಹೈದರಾಲಿ, ಟಿಪ್ಪುವಿನ ಸೈನ್ಯದಲ್ಲಿ ತಳಿಗಳಬಂಜಾರವೆಂಬ ದಳಪ್ರಮುಖವಾಗಿತ್ತು. ಕೇವಲ ೨೩೭ ಅಮೃತಮಹಲ್ ತಳಿಯ ಎತ್ತುಗಳು ೩೦೦೦ದಷ್ಟಿದ್ದ ಹೈದರಾಬಾದ್ ನಿಜಾಮನ ಸೈನ್ಯವನ್ನು ಸೋಲಿಸಿ ಓಡಿಸಿರುವುದು ಇಂದು ಇತಿಹಾಸ ಹಾಗೂ ಅವುಗಳ ಸಾಮರ್ಥ್ಯವನ್ನು ತೋರಿಸಿ ಕೊಡುತ್ತದೆ. ಮೊದಲ ಹಾಗೂ ದ್ವಿತೀಯ ಮಹಾಯುದ್ಧಗಳಲ್ಲಿ ಯುದ್ಧ ಪರಿಕರಗಳನ್ನು ಸಾಗಿಸಲು ತಳಿಯ ಎತ್ತುಗಳು ಉಪಕರಿಸಿದ್ದವು ಎನ್ನುವುದನ್ನು ವಿಶ್ವಯುದ್ಧದ ಇತಿಹಾಸ ಹೇಳುತ್ತದೆ.
ಗಂಟೆಗಳ ಕಾಲ ಆಹಾರ, ನೀರು ಸೇವಿಸದೇ ಸಾಮಾನು ಸಾಗಿಸುವುದು ತಳಿಯ ವೈಶಿಷ್ಟ್ಯ. ಹಾಸನ, ದಕ್ಷಿಣಕನ್ನಡದ ಕೆಲವು ಭಾಗ, ಚಿಕ್ಕಮಗಳೂರು, ಹಳೇ ಮೈಸೂರು ಪ್ರದೇಶ, ಮಂಡ್ಯ ಮೊದಲಾದೆಡೆ ತಳಿಯ ಸಂವರ್ಧನೆಗಾಗಿಅಮೃತಮಹಲ್ ಕಾವಲುಭೂಮಿಬಿಟ್ಟಂತಹ ಉದಾಹರಣೆಗಳು ನೋಡಲು ಸಿಗುತ್ತವೆ. ಆದುದರಿಂದ ನಮ್ಮ ಅವಗಣನೆಯಿಂದಾಗಿ ಕಾವಲು ಭೂಮಿಗಳು ಅತಿಕ್ರಮಣವಾಗುತ್ತಿವೆ. ಒಳ್ಳೆಯ ತಳಿಗಳು ಕೂಡ ಅಂತ್ಯವಾಗುವ ನಿಟ್ಟಿನಲ್ಲಿವೆ.
ಈಗಲಾದರೂ ಅಮೃತಮಹಲ್ ತಳಿಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿದಲ್ಲಿ ತನ್ಮೂಲಕ ಇಂದಿನ ಬತ್ತುತ್ತಿರುವ ಇಂಧನ ವ್ಯವಸ್ಥೆಗೆ ಹಾಗೂ ಕಾರ್ಮಿಕ ಸಮಸ್ಯೆಗೆ ಪರ್ಯಾಯವಾಗಬಹುದು.


Friday, May 27, 2011

ಸಾಹಿವಾಲ್:ಉಭಯ ಕುಶಲೋಪರಿ ಸಾಂಪ್ರತ?


ಪ್ರೀಯ ಕೌಲೀ,
ಕ್ಷೇಮ ತಾನೆ? ಭಾರತದಲ್ಲೀಗ ಕಡು ಬಿಸಿಲು.. ಅಲ್ಲವೆ? ಬಹುಶಃ ವೈಶಾಖದ ಬಿಸಿಲ ಬಾಧೆಯಿಂದ ನಿನ್ನ ಗೆಳೆಯರೆಲ್ಲ ಮೆಲುಸಿರು ತೆಗೆಯುತ್ತ ನಿಂತಿರುವಾಗ ನೀನು ಮೊಣಕಾಲುದ್ದದ ಬಾಲವನ್ನ ನೆಪ ಮಾತ್ರಕ್ಕೆ ಬೀಸುತ್ತ ಹಾಯಾಗಿ ಪತ್ರ ಒದುತ್ತ ತಣ್ಣಗೆ  ನಿಂತಿದ್ದಿ .. Smile
ಹೌದು ಮಗಳೆ..... ಪರಶಿವನ ಅನುಗ್ರಹ.. ನಾವಂತಹ ಕುಲದಲ್ಲಿ ಹುಟ್ಟಿದೆವು.. ಎಂತ ಬಿಸಿಗೂ ದೇಹದ ತಾಪಮಾನದಲ್ಲಿ  ವ್ಯತ್ಯಯವಾಗದೆ ಉಳಿಸುವ ವಿಷೆಶ ಚರ್ಮ ಹೋಂದಿರುವ ಉತ್ಕೃಷ್ಟ ಕುಲ.
ನಮ್ಮ ಜಾತಿಯ ಬಗ್ಗೆ ಅಲ್ಲಿರುವ ನಿನ್ನ ಹಿರಿಯರು ಅದೇಷ್ಟು ಹೇಳಿದರೂ ನಿನ್ನ ಕೀಳರಿಮೆ ಹೋಗುತ್ತಿಲ್ಲವೆಂದು ನಿನ್ನಮ್ಮ ಹೇಳುತ್ತಿದ್ದಳು. ನೀನಾದ್ರೂ ನಾಕು ಮಾತು ಹೇಳು ಬ್ರೌನೀ ಅಂತ ಅವಳದ್ದು ಒಂದೆ ‘ಗೋಗರೆತ’ . . . ಭಾರತದಲ್ಲಿ ಮೇವುಂಡಮೇಲೆ ಭಾರತೀಯರ ಗುಣ  ಬರದೆ ಹೋದೀತೆ ಅಂತ ನಾನು  ಹೇಳಿದ್ದು ತಮಾಷೆಗೆ ಅಷ್ಟೆ..
ಮಗು, ನಿನ್ನ ಕೀಳರಿಮೆ ತೀರ ಅರ್ಥಹೀನ. ಬಲುದೂರದ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನ ವಾತಾನುಕೂಲಿ ಕೊಟ್ಟಿಗೆಯಿಂದ ನಾನು ಹೀಗೆ ಹೇಳುವಾಗ ನಿನಗೆ ಇದು ಬರಿ ಒಣ ಉಪದೇಶವಾಗಿ ಅನ್ನಿಸಬಹುದು. ಆದರೆ ಇದನ್ನು ಓದುತ್ತ ಹೋದಂತೆ ನಿನಗದು ದೂರವಾದರೆ ಪತ್ರ ಧನ್ಯ.24_sahiwal_e
ನಮ್ಮದು ಭಾರತೀಯ ಗೋಪರಂಪರೆಯಲ್ಲಿ ಅತ್ಯುತ್ಕ್ರುಷ್ಟ ಹಾಲಿನ ತಳಿ ಎನ್ನಿಸಿದ ‘ಸಾಹಿವಾಲ್’ ಎಂಬ ಜಾತಿ. ನಮ್ಮ ಅಜ್ಜನ ಮುತ್ತಜ್ಜನ ಅಜ್ಜ ಈಗಿನ ಪಾಕಿಸ್ತಾನದ (ಆಗ ಭಾರತವೇ ಆಗಿತ್ತು) ಸಾಹಿವಾಲ್ ನಗರದವರು. ಅಲ್ಲಿ ‘ಜಂಗ್ಳಿ’ಗಳು ಎಂಬ ಜನರು ನಮ್ಮನ್ನು ದೊಡ್ಡ ಸಂಖ್ಯೆಯಲ್ಲಿ ಸಾಕುತ್ತಿದ್ದರಂತೆ. ಎಂತ ಬಿಸಿಲಿಗೂ ಜಗ್ಗದ ನಮ್ಮ ದೇಹ ಪ್ರಕೃತಿ ನಮ್ಮನ್ನು ಬೇಗ ಜನಪ್ರಿಯರನ್ನಾಗಿಸಿ ಅಲ್ಲಿಂದ ಪಂಜಾಬ್ , ಉತ್ತರಾಂಚಲ ದಾಟಿಸಿ ಈಗ, ನಾವಿಲ್ಲದ ತಾವೇ ಭಾರತದಲ್ಲಿಲ್ಲ ಎನ್ನುವಂತಾಯಿತು. ಬರೀ ಅದೊಂದೆ ಕಾರಣವಲ್ಲ, ನಮ್ಮ ರೋಗ ನಿರೋಧಕತೆ, ಅತ್ಯುತ್ತಮ ಹಾಲು ಉತ್ಪಾದಕತೆ ಎಲ್ಲವು ನಮ್ಮನ್ನು ಸರ್ವವ್ಯಾಪಿಯನ್ನಾಗಿಸಿದವು ಎನ್ನು.
ನಮ್ಮ ಬಗ್ಗೆ ಯಾರಾದರೂ ಕೇಳಿದ್ರೆ ಪೆಪ್ಪೆಪ್ಪೆ ಬೆಬ್ಬೆಬ್ಬೆ ಅಂತ ಅನ್ನಬಾರದಲ್ಲ ಅಂತ ಒಂದಿಷ್ಟು ಹೇಳುತ್ತೆನೆ ಕೇಳು.
ನಮ್ಮ ಜಾತಿಯವರೆಲ್ಲ ನೀನೆ ನೋಡಿದ ಹಾಗೆ ಕೆಂಪು ಅಥವ ಊದಾ ಬಣ್ಣ. (ನನ್ನ ಅಚ್ಚ ಊದಾ ಬಣ್ಣ ನೋಡಿಯೆ ನನಗೆ ಬ್ರೌನಿ ಅಂತ ನಮ್ಮ ಒಡೆಯ ಕರೆದ ಅಂತ ನಮ್ಮಮ್ಮ  ಮುದ್ದು ಮಾಡುತ್ತಾ ಹೇಳುತ್ತಿರುತ್ತಾಳೆ). ೩೫೦ ಕೆ.ಜಿ ತೂಗುವ ನಮ್ಮನ್ನು ಮಧ್ಯಮಗಾತ್ರ ಗೋವುಗಳಾಗಿ ವರ್ಗೀಕರಿಸುತ್ತರೆ.
ಮೊದಲ ಕರು ಈಯುವುದು ಸಾಮಾನ್ಯವಾಗಿ ೩೫ ರಿಂದ ೪೦ ತಿಂಗಳಿಗೆ. ನಾಚಬೇಡ, ಮುಂದೆ ಓದು. ನಂತರ ಸಾಮಾನ್ಯವಾಗಿ ೪೦೦-೪೨೫ ದಿನಗಳ ಅವಧಿ ಮುಂದಿನ ಕರುವಿಗೆ. ಹೀಗೇ ಸಾಗುತ್ತ ೧೦-೧೨ ಕರು ಒಂದು ಜೀವಮಾನಕ್ಕೆ. ಅಗಲ ಕಿವಿಗಳು, ಉದ್ದ ಬಾಲ ಹಿಂಚಾಚಿರುವ ಕೊಡುಗಳು.. ಬೇಡ ಬಿಡು. ಇವೆಲ್ಲ ಗೊತ್ತಿದೆ ಬಿಡು ಚಿಕ್ಕಮ್ಮ ಅಂತಿಯೇನೊ.
ಇದು ಬರಿ ನಿನಗೆ ಹೇಳಿದ್ದಲ್ಲ ಮಗಳೆ; ಅದು ನನ್ನ ಸ್ವಗತ ಕೂಡ. ತವರಿನ ನೆನಪುಗಳ ನೇವರಿಕೆ ಕೂಡ. ೧೯೫೦ರಲ್ಲಿ ನಿನ್ನ ಮುತ್ತಜ್ಜಿ ಯ  ಅಜ್ಜಿಯನ್ನು  ಅವಳೊಂದಿಗೆ ಇನ್ನೂ ನೂರಾರು ಗೋವುಗಳನ್ನು ಭಾರತಕ್ಕೆ ಬಂದಿದ್ದ   ನ್ಯೂ ಗುಯ್‌ನಾದ  ಪ್ರವಾಸಿಗರು, ಸಂಶೋದಕರು ನೋಡಿ ಮೆಚ್ಚಿ ಅಲ್ಲಿಗೆ  ಕರತಂದು ಅಲ್ಲೆಲ್ಲ ನಾವು ಫ಼ೇಮಸ್ ಆಗಿ ನಂತರ ಇಲ್ಲಿ ಆಸ್ಟ್ರೇಲಿಯಕ್ಕೆ ರವಾನೆಯಾಗಿ ಬ್ರಿಸ್ಬೇನ್‌ನ ಹವಾನಿಯಂತ್ರಿತ ಕೊಟ್ಟಿಗೆಯಲ್ಲಿ ನಾನು ಹುಟ್ಟುವಾಗ ನಮ್ಮ ವಿಶ್ವ ಪ್ರವಾಸಕ್ಕೆ ಬರೊಬ್ಬರಿ ೫೦ ವರ್ಷ. ಆಸ್ಟ್ರೇಲಿಯಕ್ಕೆ ಬಂದಾಗ ನಾವು ಹೈನುಗಾರಿಕೆ, ಮತ್ತು ಊಳುಮೆಗೆ ಬಳಸಲ್ಪಡುತ್ತಿದ್ದೆವಾದರೂ ನಂತರ ನಮ್ಮನ್ನು ಉತ್ತಮ ಹಾಲಿನ ತಳಿಯಾಗಿ ಅಭಿವೃದ್ಧಿಪಡಿಸಿದರು. ನಮ್ಮ ಉಪತಳಿಗಳಾದ Australian milking Zebu, Australian friesian sahiwal ಜಗತ್ಪ್ರಸಿದ್ದಿ. ಕೀನ್ಯಾ ದೇಶದಲ್ಲಂತೂ ‘ಸಾಹಿವಾಲ್’ ಮನೆಮಾತು. ನಾವಿಲ್ಲಿ ಬಂದು ೫೦ ವರ್ಷಗಳೆ ಕಳೆದದ್ದರಿಂದ ನಮ್ಮ ದೇಹದಲ್ಲಿ  ಸಣ್ಣ ಪುಟ್ಟ ಬದಲಾವಣೆಗಳಾಗಿವೆ. ಹಾಗಾಗಿ ಅಲ್ಲಿ ಇಲ್ಲಿ ನಮ್ಮ ಜಾತಿಯ ಬಗ್ಗೆ  ಕೇಳಿದ್ದನ್ನ ನೆನಪು ಮಾಡಿಕೊಳ್ಳುತ್ತ ಭಾರತದ ಪುಣ್ಯಭೂಮಿಯ ಬಗ್ಗೆ ಧ್ಯಾನಿಸುತ್ತ... ಬಿಡು; ವಿಷಯ ಎಲ್ಲೆಲ್ಲೊ ಹೋಯಿತು.
ಹೀಗಾಗಿ ವಿಶ್ವ ಪ್ರಸಿದ್ಧಿಯಾಗಿರುವ ತಳಿಯೊಂದರ ಕೂಸೆಂದು ಖುಶಿ ಪಡಬೇಕೆ ವಿನಹ..
ಒಮ್ಮೆ ಹತ್ತಿರದಿಂದ ಗಮನಿಸು, ನಿನ್ನ ಕೀಳರಿಮೆಗೆ  ಕಾರಣವಾಗಿರುವ ಆ ನಿನ್ನ ಜೆರ್ಸಿ ಗೆಳೆಯರನ್ನು..  ಹುಳ ಹುಪ್ಪಟೆಗಳೆಲ್ಲ ಮೈ ಹತ್ತಿಸಿಕೊಂಡು   ತರ ತರ ರೋಗಗಳಿಂದ ಸದಾ ಪ್ರಯಾಸ ಪಡುತ್ತ ಸಾಕಿರುವವರಿಗೆ ಸಾಕೋಸಾಕೆನ್ನಿಸುವ  ಅವುಗಳ ತೊಂದರೆ ನಿನಗೆಂದಾದರೂ ಕಾಡಿದ್ದಿದೆಯೆ? ಮೈಯಲ್ಲಿ ಸ್ರವಿಸುವ ವಿಶೇಷ ದ್ರವದಿಂದ ಹುಳಹುಪ್ಪಟೆ ಕ್ರಿಮಿಕೀಟಗಳನ್ನು ಮಾರುದೂರ ಓಡಿಸುವ ಈ ಅದ್ಭುತ ಕೊಡುಗೆಗಾಗಿ ಶಿವನಿಗೆ ಅದೇಷ್ಟೂ ವಂದಿಸಿದರೂ ಕಡಿಮೆ ಮಗಳೆ.. ಅವರ ಹಾಗೆ ಅರ್ದ ಕೌಳಿಗೆ ಹಾಲು ಕರೆಯುತ್ತಲೆ ಕಾಲೆತ್ತಿ ‘ಚಾಳಿ’ ಮಾಡುವ ಕೃಪಣತೆ ನಮ್ಮ ಜಾತಿ ದನಗಳಲ್ಲೆಂದಾದರೂ ಕಂಡಿದ್ದೀಯಾ? ಕಂಡಿದ್ದರೆ ಅದ್ಯಾವುದೊ ಮಿಶ್ರತಳಿ ಎಂದು ತಿಳಿ. ಹೇಳು; ಯಾರಿಗಿದೆ ನಿನ್ನ ಸರಿಸಾಟಿಯಾಗಿ ದಿನವಿಡೀ ಉಳುವ ಆ ಅಸೀಮ ಬಲ?   ದಿನಕ್ಕೆ ೧೫-೨೦ ಲೀಟರ್ ಹಾಲು ಕೊಡುವ ಅಪರೂಪದ ಶಕ್ತಿ ಹೊಂದಿದ್ದೂ ನೀನು ಅಳುವುದು ಯಾಕೆ? ಕೊಟ್ಟಿಗೆಯ ತುಂಬ ಆ ವಿದೇಷಿ ವಯ್ಯ್ಯಾರಿಗಳೇ ತುಂಬಿ ಹೋಗಿ , ಜಾತಿ ಭಾಂದವರೆ ಇಲ್ಲದೆ  ಕಾಡುವ ಒಂಟಿತನದಿಂದಲೆ? ಅಳದಿರು ಮಗು.. ಮುಂದೊಂದು ಕಾಲ ಬಂದೀತು.. ಭಾರತೀಯ ಗೋ ತಳಿಗಳ ಮೆಲುದನಿಯ ಮೆಲುಕು ಭಾರತೀಯತೆಯ ಪುನರುತ್ಠಾನದ ಪ್ರತೀಕವಾಗುವ ಕಾಲ. ತಳಿಸಂಕರದ ಹೆಜ್ಜಾಲವನ್ನು ಮುರಿದು ಭಾರತೀಯ ಗೋವುಗಳು ತಮ್ಮತನ ಮೆರೆಯುವ ಕಾಲ. ಕಟುಕರಮನೆ ಕಾಮಧೇನುವಿನ ದೇಗುಲವಾಗುವ ಕಾಲ. ಅದು ದೂರವಿಲ್ಲವೆಂದು ನನ್ನ ಭಾವನೆ.
ಒಡೆಯನ ಪ್ರೀತಿಯ ನೇವರಿಕೆಗಳಿಂದ ಮುದಗೊಳ್ಳುವ ನಿನ್ನ ಬಗ್ಗೆ ನನಗಿರುವ ಹೊಟ್ಟೆಕಿಚ್ಚು, ಹಾಲು ಕರೆಯುವುದರಿಂದ ಹಿಡಿದು ಎಲ್ಲವನ್ನೂ ಯಾಂತ್ರೀಕೃತಗೋಳಿಸಿರುವ ಇಲ್ಲಿಯ ವ್ಯವಸ್ಥೆಯ ಬಗೆಗೆ ನನಗಿರುವ ನೋವು ಇವನ್ನು ಕುರಿತು ಇನ್ನೆಂದಾರೂ ಬರದೇನು. ಅದನ್ನೆಲ್ಲ ಹೇಳಿ ನಿನಗೆ ಬೇಸರ ಮೂಡಿಸಲು ಮನಬರುತ್ತಿಲ್ಲ.
ಆರೋಗ್ಯದ ಬಗ್ಗೆ ಕಾಳಜಿ ಇರಲಿ, ದಾರಿಯಲ್ಲಿ ಕಂಡಿದ್ದೆಲ್ಲ ತಿನ್ನಬೇಡ. ಪ್ಲಾಸ್ಟಿಕ್ ಬಗ್ಗೆ ಹುಷಾರು.
ನಿನ್ನ ಚಿಕ್ಕಮ್ಮ,
ಬ್ರೌನಿ,
ಬ್ರಿಸ್ಬೇನ್.
ಆಸ್ಟ್ರೇಲಿಯ.

(ಗೋವಿಶ್ವ ಪತ್ರಿಕೆಯ ’ಮಾಸದ ಗೋವು’ ಅಂಕಣ ಬರಹ,  ೨೦೦೮ರ ಎಪ್ರಿಲ್ ಸಂಚಿಕೆಯಲ್ಲಿ ಪ್ರಕಟಿತ)

Wednesday, March 24, 2010

ಗೋ ’ಸಾಮ್ರಾಟ್’ ಕಾಂಕ್ರ‍ೇಜ್!

ನೀವು ಕಳೆದ ಎಪ್ರಿಲ್‌ನಲ್ಲಿ ಹೊಸನಗರದಲ್ಲಿ ಜರುಗಿದ ವಿಶ್ವ ಗೋ ಸಮ್ಮೇಳನಕ್ಕೆ ಬಂದವರಾಗಿದ್ದರೆ, ಸಭಾಂಗಣದ ಮಧ್ಯದಲ್ಲಿ, ಸಮ್ಮೇಳನಕ್ಕಾಗಿ ಬಂದ ದೈವಪ್ರತಿನಿದಿಯೋ ಎಂಬಂತೆ ಶಾಂತ, ಗಂಭೀರ ಸ್ವಭಾವಗಳ ಮೂರ್ತ ರೂಪವಾದ ಹೋರಿಯೊಂದನ್ನು ನೋಡಿರುತ್ತೀರಿ, ಕಣ್ಣರಳಿಸಿರುತ್ತೀರಿ, ಸ್ಥಂಬೀಭೂತರಾಗಿರುತ್ತೀರಿ, ‘ಒಹ್’ ಎನ್ನುವಂತದ್ದೊಂದು ಉದ್ಗಾರ ಹೊರಡಿಸಿರುತ್ತೀರಿ. ಆಸ್ತಿಕರಾದರೆ ಪ್ರತ್ಯಕ್ಷ ನಂದಿಯನ್ನೆ ಕಂಡೆನೋ ಎನ್ನುವ ದಿವ್ಯ ಆನಂದವೊಂದು ನಿಮ್ಮ ಹೃದಯವನ್ನು ತುಂಬಿರಲೂ ಸಾಕು. ಹಾಗೆ ಕೇವಲ ಉಪಸ್ಥಿತಿಯೊಂದರಿಂದಲೆ ನೋಟಕನ ಗೋಪ್ರೇಮವನ್ನು ಜಾಗೃತಗೊಳಿಸಬಲ್ಲ ಆ ನಂದಿಯ ಹೆಸರು  “ಸಾಮ್ರಾಟ್”!

kankrej


ಸಾಮ್ರಾಟ್ ಭಾರತದ ಅಳಿದುಳಿದ ೩೨ ಅತ್ಯಮೂಲ್ಯ ತಳಿಗಳಲ್ಲೊಂದಾದ ಕಾಂಕ್ರೇಜ್ ಜಾತಿಗೆ ಸೇರಿದ್ದು. ಅಹ್ಮದಾಬಾದ್‌ನ ಶ್ರೀ ಜಗನ್ನಾಥ ಮಂದಿರದ ಗೋಶಾಲೆಯಲ್ಲಿ ಗಾಡಿ ಎಳೆಯುತ್ತಿದ್ದ ಈ ಚೆಲುವ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಚಿತ್ತವನ್ನು ಮೊದಲ ನೋಟಕ್ಕೇ ಸೆಳೆದುದರಿಂದ ಕಳೆದ ಮಾರ್ಚಿನಲ್ಲಿ ಶ್ರೀಮಠಕ್ಕೆ ಈತನ ಬರೋಣವಾಯಿತು. ಭಯಹುಟ್ಟಿಸುವಂತೆ ೭-೮ ಅಡಿಗಳಷ್ಟು ಎತ್ತರ, ಒಂದು ಮೀಟರ್‌ನಷ್ಟು ಕೋಡು ಹೊಂದಿದ್ದರೂ ಪರಮ ಶಾಂತ ಸ್ವಭಾವದ ೧೮ರ ಹರೆಯದ ಈತ ಬಂದ ಕೆಲದಿನಗಳಲ್ಲೇ ಶ್ರೀಮಠದ ಭಕ್ತರ ಅಚ್ಚುಮೆಚ್ಚಿನವನಾಗಿದ್ದ. 


ಕಾಂಕ್ರೇಜ್ ತಳಿಯ ಗೋವುಗಳೆ  ಹಾಗೆ, ಬೃಹದಾಕಾರವಾದರೂ ಅತ್ಯಂತ ಶಾಂತ  ಸ್ವಭಾವದವು. ಭಾರತದ ಮೂಲ ತಳಿಗಳಲ್ಲಿ ಕಾಂಕ್ರೇಜ್ ಕೂಡ ಒಂದು. ಶಿಲಾಯುಗದ ಕೆತ್ತನೆಗಳಲ್ಲಿ, ಹರkankrej-bull-copy-300x293ಪ್ಪಾ –ಮೊಹಂಜದಾರೊನ ಶಿಲ್ಪಗಳಲ್ಲಿ ಕಾಣಸಿಗುವ ಗೋವಿನ ಚಿತ್ರ ಕಾಂಕ್ರೇಜ್‌ನದೇ ಎಂಬುದಕ್ಕೆ ಅಧಾರಗಳಿವೆ. ಸಾಮಾನ್ಯವಾಗಿ ಬೂದು, ಅಪರೂಪಕ್ಕೆ ನಸುಕಪ್ಪು ಬಣ್ಣದ ಇವುಗಳು ಉಬ್ಬಿದಂತಿರುವ ಸಣ್ಣ ಮೂಗು, ನೀಳವಾದ ನೇತಾಡುವ ಕಿವಿ, ಗಟ್ಟಿಯಾದ ನಿಡಿದಾದ ಕೊಂಬನ್ನು ಹೊಂದಿರುತ್ತವೆ. ಹೋರಿಗಳು ಭುಜ, ತೊಡೆ ಮತ್ತು ಕಾಲುಗಳಲ್ಲಿ ಕಪ್ಪು ಬಣ್ಣ ಹೊಂದಿರುವುದು ವಿಶೇಷ.
ಗುಜರಾತ್‌ನ ಕಛ್ ಹಾಗು ರಾಜಸ್ಥಾನದ ಜೋಧಪುರ  ಪ್ರಾಂತ್ಯ ಇವುಗಳ ತವರೂರು. ಈ ತಳಿಯ ಗೋವುಗಳನ್ನು ಕೆಲಸಗಾರ ತಳಿಯಾಗಿಯೂ ಹಾಲಿನ ತಳಿಯಾಗಿಯೂ (ಉಭಯ) ಬಳಸಬಹುದೆನ್ನುತ್ತಾರೆ ಅಲ್ಲಿನ ಸಂತೃಪ್ತ ಹೈನುಗಾರರು. ಅಲ್ಲಿಂದ ಶ್ರೀಮಠ ನೂರಕ್ಕೂ ಹೆಚ್ಚಿನ ಗೊವುಗಳನ್ನು ತಂದು ರಾಜ್ಯದಾದ್ಯಂತ ವಿತರಿಸಿದೆ.  ರಾಜಸ್ತಾನದಲ್ಲಿ ದಿನಕ್ಕೆ  ೮-೧೦ ಲೀಟರ್‌ಗಳಷ್ಟು  ಹಾಲು ಸುರಿಸುವ ಇವು ಕರ್ನಾಟಕದಲ್ಲಿ ೧೦-೧೨ ಲೀಟರ್ ಕೊಡುತ್ತಿರುವ ಉದಾಹರಣೆಗಳಿವೆ ಎಂದು ತಿಳಿದರೆ ಕವಿಗಳು  “ಜೇನಿನ ಹೊಳೆಯೋ, ಹಾಲಿನ ಮಳೆಯೊ” ಎಂದು ಕೌಳಿಗೆ ಹಾಲು ಕುಡಿದು ಉಚ್ಚ ಕಂಠದಿಂದ ಹಾಡಿಯಾರು!
ವಿಶ್ವದ ಅತ್ಯಂತ ದೊಡ್ಡ ಗೋಶಾಲೆ ಫತಮೆಡಾದ  ಶ್ರೀ ಗೊಪಾಲ ಗೋವರ್ಧನ ಗೋಧಾಮದಲ್ಲಿ ಎರಡು ವರ್ಷಕ್ಕೆ ಮೊದಲು ಕಾಂಕ್ರೇಜ್ ತಳಿಯ ಗೋವುಗಳು ಸುಮಾರು ಎರಡೂವರೆ ಲಕ್ಷದಷ್ಟಿದ್ದವು. ಇತ್ತೀಚಿನ ಉತ್ತಮ ೨ ಮಳೆಗಾಲದ ನಂತರ ರೈತರುಗಳು ಇಲ್ಲಿಂದ ಈ ಗೋವುಗಳನ್ನು ತೆಗೆದುಕೊಂಡು ಹೋದುದರಿಂದ ಅವುಗಳ ಸಂಖ್ಯೆ ಒಂದು ಲಕ್ಷಕ್ಕಿಳಿದಿವೆ. ವಿದೇಶಿ ತಳಿಗಳ ಭರಾಟೆಯ ಮಧ್ಯದಲ್ಲೂ ಇವುಗಳ ಪ್ರಭಾವ ಅದೆಷ್ಟಿದೆಯೆಂದು ಇದರಿಂದ ಅಂದಾಜಿಸಬಹುದು.

Thursday, March 18, 2010

ಕೃಷ್ಣಾಕ್ಕೆ ಬೇಕಾಗಿದೆ ತುರ್ತಾಗಿ ರಕ್ಷಣೆ



ಮೊನ್ನೆ ಕಾಮದುಘಾ ಕಾರ್ಯಕರ್ತ ಸದಾಶಿವ ಮೊಂತಿಮಾರ್ ಅವರನ್ನು ಮಾಸದ ಗೋವು ಅಂಕಣದ ವಿಚಾರವಾಗಿ ಸಂಪರ್ಕಿಸಿದಾಗ ಅಘಾತಕಾರಿ ವಿಚಾರ ಒಂದನ್ನು ಹೇಳಿದರು. ಅದು ಭಾರತೀಯ ಗೋತಳಿ ಕೃಷ್ಣಾ ಅಥವಾ ಕೃಷ್ಣಾತೀರಿ ವಿನಾಶದ ತುತ್ತತುದಿಯಲ್ಲಿರುವ ಬಗ್ಗೆ. ಒಂದು ಕಾಲದಲ್ಲಿ ಕೃಷ್ಣಾತೀರಪ್ರದೇಶದ ಕಲ್ಲು ಮಿಶ್ರಿತ ಕಪ್ಪು ಮಣ್ಣಿನಲ್ಲಿ ಬೇಸಾಯ ಮಾಡುವುದೇ ಒಂದು ಸವಾಲು ಎಂದೆನಿಸಿದ್ದಾಗ ರೈತರ ಜೀವನನಿರ್ವಹಣೆಯ ನೊಗಕ್ಕೆ ತಾವೂ ಹೆಗಲು ಕೊಟ್ಟು, ಅಲ್ಲಿನ ಕೃಷಿಪದ್ಧತಿಯ ಜೀವನಾಡಿ ಎನಿಸಿ, ರೈತರ ಮೊಗದಲ್ಲಿ ನಗುವರಳಿಸಿದ್ದ ಕೃಷ್ಣಾ ತಳಿ ವಿನಾಶದ ಅಂಚಿಗೆ ಸರಿದು ಈಗ, ಕಷ್ಠಪಟ್ಟು ಹುಡುಕಿದರೆ ೩೦-೩೫ ಹಸುಗಳು, ೫-೬ ಹೋರಿಗಳಷ್ಟೆ ಇವೆ ಎಂಬ ಹಂತ ತಲುಪಿದೆ ಎಂದು ತಿಳಿಸುವಾಗ ಆ ಗೋಪ್ರೇಮಿಯ ಧ್ವನಿಯಲ್ಲಿ ಕಳವಳದ ನಡುಕ....
ಕೃಷ್ಣಾ ನದಿಯ ದಂಡೆಗುಂಟ ಇರುವ ವಿಶಿಷ್ಟ ಕಪ್ಪು ಕಲ್ಲು ಮಣ್ಣಿಗೆ, ಘೋರ ಬಿಸಿಲಿಗೆ ಹೂಟೆ ಮಾಡುವುದೇ ಒಂದು ಸಮಸ್ಯೆ ಅಂತಾಗಿ ಕಷ್ಟಸಹಿಷ್ಣುತಳಿಯೊಂದರ ಅನ್ವೇಷಣೆಯಲ್ಲಿ ದೊರಕಿದ್ದು ಕೃಷ್ಣಾ ಅಥವಾ ಕೃಷ್ಣಾತೀರಿ. ಹತ್ತೊಂಬತ್ತನೆ ಶತಮಾನದ ಆದಿಯಿಂದಲೂ ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣಾ ನದಿ ತೀರಪ್ರದೇಶ ಅಂದರೆ ಮಹಾರಾಷ್ಟ್ರದ ಮೀರಜ್,ಸಾಂಗ್ಲಿ, ಕೊಲ್ಲಾಪುರ ಕರ್ನಾಟಕದ ಜಮಖಂಡಿ, ಬೆಳಗಾವಿ, ರಾಯಚೂರು ಪ್ರದೇಶದ ಜೀವನಾಡಿಯಾಗಿದ್ದವು ಕೃಷ್ಣಾ ತಳಿಯ ಗೋವುಗಳು. ಮಹಾರಾಷ್ಟ್ರದ ಸಾಂಗ್ಲಿ ಮಹಾರಾಜ ಇದರ ಮುಖ್ಯ ಪೋಷಕ.

ಅತಿಊಷ್ಣ ಹವಮಾನದಲ್ಲೂ ವಿರಾಮವಿಲ್ಲದೆ ೨೫-೩೦ ಕಿ.ಮಿ. ನಡೆಯಬಲ್ಲ ಇವುಗಳ ಕಷ್ಟಸಹಿಷ್ಣುತೆ,
೨ ಟನ್ನಿನವರೆಗೂ ಭಾರ ಎಳೆಯಬಲ್ಲ ಸಾಮರ್ಥ್ಯ, ಅತಿ ಕಡಿಮೆ ಆಹಾರ ಸೇವಿಸಿ ದಿನಕ್ಕೆ ೮-೧೦ ತಾಸು ದುಡಿಯಬಲ್ಲ ಗುಣಗಳಿಂದ ಕೃಷ್ಣಾ, ಇಂದಿಗೂ ಸಣ್ಣ ಮತ್ತು ಮಧ್ಯಮ ರೈತರಿಗೆ ವರದಾನ. ಬೆವರಿನ ಗ್ರಂಥಿಗಳ ಸಾಂದ್ರತೆ, ಶರೀರ ರಚನೆ ಮುಖ್ಯವಾಗಿ ಗೊರಸಿನ ರಚನೆ ಈ ಭಾಗದ ನೆಲಕ್ಕೆ, ಹವಾಗುಣಕ್ಕೆ ಅತ್ಯಂತ ಸೂಕ್ತ. ಸಂತಾನದ ಅವಧಿ ಕೂಡ ದೊಡ್ಡದೇ, ವರ್ಷಕ್ಕೊಂದರಂತೆ ೯-೧೨ ಕರು ಈಯಬಲ್ಲವು. ಹಾಲು ದಿನಕ್ಕೆ ನಾಲ್ಕರಿಂದ ಐದು ಲೀಟರ್. ನೆಲ ಮುಟ್ಟುವಂತಿರುವ ಬಾಲ, ಸಣ್ಣ ಕಿವಿ, ಅಗಲ ಹಣೆ, ಒಳಚಾಚಿಕೊಂಡಂತಿರುವ ಕೊಂಬು ಹೊಂದಿದೆ ಕೃಷ್ಣಾ. ತಮ್ಮ ವೈಶಿಷ್ಟ್ಯತೆಗಳಿಂದ ವಿದೇಶಿಯರನ್ನೂ ಸೆಳೆದ ಇವು ಬ್ರೆಜ಼ಿಲ್, ದ.ಅಮೆರಿಕ ದೇಶಗಳಿಗೆ ದೊಡ್ಡ ಸಂಖ್ಯೆಯಲ್ಲಿ ರಫ್ತಾಗಿವೆ.


ಇಷ್ಟೆಲ್ಲ ಗುಣವಿಶೇಷಗಳನ್ನು ಹೊಂದಿದ್ದರೂ ಹಿತ್ತಲ ಗಿಡ ಮದ್ದಲ್ಲ ಎನ್ನುವ ಮನೋಭಾವಕ್ಕೆ ತುತ್ತಾಗಿ
ಅವನತಿಯ ಅಂಚಿಗೆ ಕೃಷ್ಣಾ ಸರಿದಿರುವುದು ಖೇದಕರ.National Dairy research institute(NDRI), Indian Council oF Agricultural Research(ICAR) , ಜೊತೆಗೆ ಶ್ರೀರಾಮಚಂದ್ರಾಪುರ ಮಠ ಈ ತಳಿಯ ರಕ್ಷಣೆಗೆ ಸಮರೊಪಾದಿಯಲ್ಲಿ ಸಜ್ಜಾಗಿವೆ. ಕೃಷ್ಣಾತೀರಿಯ ಕರೆಗೆ ನಾವೂ ಓಗೊಡೊಣ ಅಲ್ಲವೆ?